ಹಾವೇರಿಯ ಸಮ್ಮೇಳನದ ಕುರಿತು ಘನತೆವೆತ್ತ ರಾಜ್ಯಪಾಲರಿಂದ ಶ್ಲಾಘನೆ
ಬೆಂಗಳೂರು: ಹಾವೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ದಾಖಲೆಗಳನ್ನು ಮೀರಿದ ಸಮ್ಮೇಳನ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಈ ಬಾರಿಯ ಗಣರಾಜ್ಯೋತ್ಸವದ ಭಾಷಣದಲ್ಲಿ ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹಲೋಟ್ ರವರು ಪ್ರಸ್ತಾಪ ಮಾಡಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಮರೆಯಲಾರದ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ, ಮಹೇಶ ಜೋಶಿ ಹೇಳಿದ್ದಾರೆ.
ಮಾಣಿಕ್–ಷಾ–ಪೆರೆಡ್ ಮೈದಾನದಲ್ಲಿ ಹಮ್ಮಿಕೊಂಡ ಈ ಬಾರಿಯ ೭೪ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದ ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹಲೋಟ್ ರವರು “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ದಿನಾಂಕ ೨೦೨೩/೦೧/೦೬ ರಿಂದ ೨೦೨೩/೦೧/೦೮ ರವರೆಗೆ ಯಶಸ್ವಿಯಾಗಿ ನೆರವೇರಿಸಲಾಯಿತು” ಎಂದು ಹೇಳಿ ಸಾಹಿತ್ಯ ಸಮ್ಮೇಳನವನ್ನು ಶ್ಲಾಘಿಸಿದರು. ಮೊದಲನೆಯ ಬಾರಿಗೆ ಗಣರಾಜ್ಯೋತ್ಸವದ ಭಾಷಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಮಾತನಾಡಿದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿ. ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನುಅರ್ಥಗರ್ಭಿತವಾಗಿ ನಡೆಸಲು ಸಹಕಾರಿಯಾದ ಕರ್ನಾಟಕ ರಾಜ್ಯ ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹಾವೇರಿ ಜಿಲ್ಲಾಡಳಿತದ ಸಹಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿಮಾನದಿಂದ ಸ್ಮರಿಸಿಕೊಳ್ಳುತ್ತಿದೆ ಎಂದು ನಾಡೋಡ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದುವರೆಗೆ ಅಖಿಲ ಭಾರತ ಮಟ್ಟ, ಜಿಲ್ಲಾ ಮಟ್ಟ,ತಾಲೂಕು ಮಟ್ಟ ಸೇರಿದಂತೆ ಸಾಕಷ್ಟು ಸಮ್ಮೇಳನಗಳನ್ನು ಮಾಡಲಾಗಿದೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ಯಾವುದೇ ಸಮ್ಮೇಳನದ ಬಗ್ಗೆ ಪ್ರಾಸ್ತಾಪ ಮಾಡಿದ ಇತಿಹಾಸವೇ ಇಲ್ಲ. ಆದರೆ ಲಕ್ಷಾಂತರ ಕನ್ನಡದ ಮನಸ್ಸುಗಳ ಸೇರುವಿಕೆ, ಶಿಸ್ತುಬದ್ಧ ವ್ಯವಸ್ಥೆ, ಅರ್ಥಪೂರ್ಣ ಗೋಷ್ಠಿಗಳು, ದಾಖಲೆಯ ರೀತಿಯಲ್ಲಿ ಪುಸ್ತಕಗಳ ಮಾರಾಟ, ನಾಡಿನ ಸಂಸ್ಕೃತಿ ಬಿಂಬಿಸುವ ಕಲಾ ತಂಡಗಳನೊಳಗೊಂಡ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಮನ ತಣಿಸುವ ಸಾಂಸ್ಕೃತಿಕ ಕಾರ್ಯಕ್ರಮ, ಉತ್ತರ ಕರ್ನಾಟಕ ರುಚಿಯ ಭರ್ಜರಿ ಭೋಜನ ಇವೆಲ್ಲವೂ ಸೇರಿದಂತೆ ಸಾರ್ಥಕ ಸಮ್ಮೇಳನ ಎನ್ನುವುದನ್ನು ಸಮಸ್ತ ಕನ್ನಡಿಗರು ಹೇಳುತ್ತಲೇ ಹಾವೇರಿಯಿಂದ ನಿರ್ಗಮಿಸಿದ್ದರು. ಇದೆಲ್ಲದಕ್ಕೆ ಕಳಶ ಪ್ರಾಯ ಎನ್ನುವಂತೆ ಗಣರಾಜ್ಯೋತ್ಸವದ ಭಾಷಣದಲ್ಲಿ ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹಲೋಟ್ ಪ್ರಸ್ತಾಪ ಮಾಡಿರುವದು ಪರಿಷತ್ತಿಗೆ ಹೆಮ್ಮೆ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಅಪಾರವಾದ ಗೌರವಹೊಂದಿದ್ದು ಪರಿಷತ್ತು ಸಹ ಸರ್ಕಾರಕ್ಕೆ ಸೂಕ್ತ ಸಂದರ್ಭದಲ್ಲಿ ಸಕಾರಾತ್ಮಕ ಸ್ಪಂದನೆ ನೀಡುತ್ತ ಬಂದಿರುವುದನ್ನು ಸರ್ಕಾರವೂ ಮನಗಂಡಿದೆ. ಮುಂದಿನ ದಿನಗಳಲ್ಲಿ ನಡೆಸುವ ಪರಿಷತ್ತಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಕ್ರಮ ಬದ್ಧ ಹಾಗೂ ಶಿಸ್ತು ಬದ್ಧವಾಗಿ ನಡೆಸುವ ಮೂಲಕ ಈಗಾಗಲೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹಲೋಟ್ ಅವರು ಸೇರಿದಂತೆ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಅವರ ಸಚಿವ ಸಂಪುಟ, ಸಮಸ್ತ ಕನ್ನಡಿಗರು ಇಟ್ಟಿರುವ ನಂಬಿಕೆ ಮತ್ತು ಗೌರವವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಲಾಗುವುದು. ಜೊತೆಗೆ ನಾಡಿನ ಜನರ ನಂಬಿಕೆಯನ್ನು ಗೌರವಿಸಿ ಮುಂದಿನ ಸಮ್ಮೇಳನಗಳನ್ನು ಸಹ ಅರ್ಥಗರ್ಭಿತವಾಗಿ ನಡೆಸಲಾಗುವುದು ಎಂದು ನಾಡೋಜ ಡಾ. ಮಹೇಶ ಜೋಶಿ ವಾಗ್ದಾನ ನೀಡಿದ್ದಾರೆ.
ಶ್ರೀನಾಥ್ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು