ನಿರಾಶ್ರಿತರು – ನಿರ್ಗತಿಕರಿಗೆ ಗೌರವಯುತ ಜೀವನಕ್ಕಾಗಿ ರವಿಯವರ ಹೋರಾಟದಲ್ಲಿ ಎಐಆರ್- ಆತ್ಮನ್ ಬೆಂಬಲಿಸಿದ ನಟ ಸೋನು ಸೂದ್
ಬೆಂಗಳೂರು : ಕೋವಿಡ್-19 ಸಾಂಕ್ರಾಮಿಕ ರೋಗವು ಇತರರಿಗೆ ಸಹಾಯ ಮಾಡಲು ತಮ್ಮ ಶಕ್ತಿ ಮೀರಿದ ವೀರರನ್ನು ಮುನ್ನಲೆಗೆ ತಂದಿತು. ಅಂತಹ ಒಬ್ಬ ಮಹಾನ್ ನಾಯಕ ಸೋನು ಸೂದ್, ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೀಡಾಗಿದ್ದ ಭಾರತೀಯರಿಗೆ ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡಿದ್ದಕ್ಕಾಗಿ, ಜನಪ್ರಿಯ ಅರುಂಧತಿ ಚಲನಚಿತ್ರದಲ್ಲಿ ಭಯಂಕರವಾದ ಖಳನಾಯಕನ ಪಶುಪತಿ ಪಾತ್ರದಲ್ಲಿ ‘ರಾ.. ವೇ… ಬೊಮ್ಮಾಲಿ…’ ಅಂತ ಗಡಸು ಧ್ವನಿಯಲ್ಲಿ ಡೈಲಾಗ್ ಹೇಳಿ ಪ್ರೇಕ್ಷಕರ ಗುಂಡಿಗೆಯನ್ನು ನಡುಗಿಸಿದ್ದ ಬಾಲಿವುಡ್ ನ ಪ್ರಖ್ಯಾತ ನಟ ‘ಆಪದ್ಬಾಂಧವ’ನೆನಿಸಿ ಭಾರತೀಯರ ಮನಸು ಗೆದ್ದ ನಿಜ ಜೀವನದ ವೀರ ನಾಯಕರೆನಿಸಿಕೊಂಡವರು.


ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ, ನಿರಾಶ್ರಿತರು ಮತ್ತು ನಿರ್ಗತಿಕರಿಗೆ ‘ಮಾನವ ಸೇವೆಯೇ, ಮಾಧವನ ಸೇವೆ’ ಎಂಬುದನ್ನು ಮನಗಂಡು, ಸಹಾಯ ಮಾಡುವುದನ್ನು ತಮ್ಮ ಜೀವನದ ಉದ್ದೇಶವನ್ನಾಗಿ ಮಾಡಿಕೊಂಡಿರುವ ಇನ್ನೊಬ್ಬ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಾಧಕ, ಸಾಮಾಜಿಕ ಚಿಂತಕ ಎಐಆರ್- ಆತ್ಮ ರವಿಯವರನ್ನು ಸೋನು ಸೂದ್ ಭೇಟಿ ಮಾಡಲು ಮಂಗಳವಾರ ಗಾರ್ಡನ್ ಸಿಟಿಗೆ ಭೇಟಿ ನೀಡಿದ್ದರು. ಎಐಆರ್ ಹ್ಯುಮಾನಿಟೇರಿಯನ್ ಹೋಮ್ಸ್ಗೆ ಭೇಟಿ ನೀಡಿದ ಸೂದ್ ಅವರು, ವಸತಿ ರಾಹಿತ್ಯ ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ಇದಕ್ಕೆ ನಮ್ಮ ಸಮಾಜವು ಮುಕ್ತ ಮನಸ್ಸಿನಿಂದ ಸ್ಪಂದಿಸಬೇಕಾದ ಅಗತ್ಯವಿದೆ ಎಂಬುದಾಗಿ ಅಭಿಪ್ರಾಯಪಟ್ಟರು. ” ಜನಸಾಮಾನ್ಯರು ಸಹ ತಮ್ಮ ಕೈಲಾದದ್ದನ್ನು ಮಾಡಲು ಮುಂದೆ ಬರಬೇಕಾಗಿದೆ. ಒಬ್ಬ ದೃಢನಿರ್ಧಾರ ಮತ್ತು ಪ್ರಬುದ್ಧ ವ್ಯಕ್ತಿಯು ಏನನ್ನು ಮಾಡಲು ಮತ್ತು ಸಾಧಿಸಲು ಸಾಧ್ಯವಾಗಬಹುದು ಎಂಬುದಕ್ಕೆ ಎಐಆರ್ ಹ್ಯಾಮ್ಯಾನಿಟೇರಿಯನ್ ಮನೆಗಳು ಒಂದು ಉದಾಹರಣೆಯಾಗಿದೆ” ಎಂದು ಸೂದ್ ಹೇಳಿದರು.
ಆಧ್ಯಾತ್ಮಿಕ ಮಾರ್ಗದರ್ಶಕ, ಪ್ರೇರಕ ಭಾಷಣಕಾರ, ಲೇಖಕ, ಗಾಯಕ ಮತ್ತು ಲೋಕೋಪಕಾರಿ, ಎಐಆರ್ (ಆತ್ಮನ್ ಇನ್ ರವಿ) ನ ಉಪಕ್ರಮವು ಮಾನವೀಯ ಮನೆಗಳು ಪರಿತ್ಯಕ್ತ ಮತ್ತು ನಿರ್ಗತಿಕರಿಗೆ ಸುರಕ್ಷತೆ, ಘನತೆ ಮತ್ತು ಯೋಗಕ್ಷೇಮದ ತಾಣವನ್ನು ಖಚಿತಪಡಿಸುತ್ತಿದೆ. ಜನರು ಬೀದಿಗಳಲ್ಲಿ ಮತ್ತು ಖಾಲಿ ಹೊಟ್ಟೆಯಲ್ಲಿ ಮಲಗುವುದನ್ನು ತಡೆಯುವ ಉದ್ದೇಶದಿಂದ, ಎಐಆರ್ ತಮ್ಮ ಎನ್ ಜಿ ಓ ಮೂಲಕ ಬೆಂಗಳೂರಿನ ಬನ್ನೇರುಘಟ್ಟ, ಚಿಕ್ಕಗುಬ್ಬಿ ಗ್ರಾಮ ಮತ್ತು ಚಂದಾಪುರದಲ್ಲಿ ಮೂರು ಎಐಆರ್ ಹ್ಯುಮ್ಯಾನಿಟೇರಿಯನ್ ಹೋಮ್ಗಳನ್ನು ಸ್ಥಾಪಿಸಿತು. ಕಳೆದ ಮೂರು ದಶಕಗಳಲ್ಲಿ ಈ ಮನೆಗಳು ಹಲವರಿಗೆ ಆಸರೆ ನೀಡಿವೆ ಹಾಗೂ (800 ಜನರಿಗೆ) ಹೊಸ ಜೀವನವನ್ನು ನೀಡಿವೆ. ಇದರ ಪ್ರಯತ್ನಗಳು ನಿರ್ಗತಿಕರ ವೈದ್ಯಕೀಯ ಬಿಲ್ಗಳನ್ನು ಪಾವತಿಸಲು ಸಹಾಯ ಮಾಡಿದೆ ಮತ್ತು ಅನೇಕ ನಿರಾಶ್ರಿತರನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸಿದೆ.
ತಲೆಗೆ ಸೂರು ನೀಡುವುದಲ್ಲದೆ ಅವರ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಕಾಪಾಡುವ ಸೌಲಭ್ಯಗಳನ್ನು ಇಲ್ಲಿ ಒದಗಿಸುತ್ತಿರುವುದನ್ನು ಗಮನಿಸಿದ ಸೂದ್ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. “ಮನೆಯಿಲ್ಲದವರಿಗೆ ಮತ್ತು ನಿರ್ಗತಿಕರಿಗೆ ನಾವು ಹಣ ಮತ್ತು ಶ್ರಮದ ಮೂಲಕ ನಮ್ಮ ಸೇವೆಯನ್ನು ವಿಸ್ತರಿಸುವುದು ಸಮಾಜದಲ್ಲಿರುವ ನಮ್ಮೆಲ್ಲರ ಕರ್ತವ್ಯ, ಆಸಕ್ತರ ಹಾಗೂ ನಿರ್ಗತಿಕರ ಬಗ್ಗೆ ಕಾಳಜಿ ವಹಿಸುವ ಇಂತಹ ಮನೆಗಳ ಅಗತ್ಯವಿದೆ ಎಂದು ಸೂದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆತ್ಮನ್ ಇನ್ ರವಿ, “ಎಐಆರ್ ಹ್ಯುಮಾನಿಟೇರಿಯನ್ ಹೋಮ್ಸ್ ಪ್ರತಿದಿನ 800 ಜನರಿಗೆ ಸೇವೆ ಸಲ್ಲಿಸುತ್ತಿದೆ ಮತ್ತು ಈಗ ನಾವು ಸೇವೆಯನ್ನು ದೇಶದ ಇತರ ಭಾಗಗಳಿಗೆ ಕೊಂಡೊಯ್ಯಲು ಯೋಜಿಸಿದ್ದೇವೆ, ಎಐಆರ್ ಹ್ಯುಮಾನಿಟೇರಿಯನ್ ಹೋಮ್ಗಳು ಶಿಶುಗಳು, ವೃದ್ಧರು, ಶೋಷಣೆಗೆ ಬಲಿಯಾದವರು ಅಥವಾ ದುರ್ಬಲಗೊಳಿಸುವ ಕಾಯಿಲೆಗಳಿಂದ ಬಳಲುತ್ತಿರುವ ಯಾರನ್ನೂ ಎಂದಿಗೂ ದೂರವಿಟ್ಟಿಲ್ಲ. ನಾವು ಅಮಾನವೀಯ ಪರಿಸ್ಥಿತಿಗಳಲ್ಲಿ ಹಸಿವಿನಿಂದ ಬಳಲುತ್ತಿರುವ, ಗಾಯಗೊಂಡವರಿಗೆ, ಅಗತ್ಯ ಇರುವ ಸೂಕ್ತ ಚಿಕಿತ್ಸೆಯನ್ನು ನೀಡಿ ಗಾಯಗಳನ್ನು ಗುಣಪಡಿಸಿ, ಮತ್ತೆ ಅವರ ಕಾಲಿನ ಮೇಲೆ ನಿಲ್ಲಲು ಸಹಾಯ ಮಾಡಿದ್ದೇವೆ. ನಮ್ಮ ಈ ಸೇವಾ ಕಾರ್ಯದಲ್ಲಿ ಎಲ್ಲರ ಬೆಂಬಲ ಬೇಕು. ಪ್ರತಿಯೊಂದು ಸಹಾಯವು ಎಷ್ಟೇ ಚಿಕ್ಕದಾಗಿದ್ದರೂ, ಅದು ಪ್ರಮುಖವಾಗುತ್ತದೆ’ ಎಂದು ಹೇಳಿದರು.
ಇತರರ ಸೇವೆಯಲ್ಲಿ ನಿಜವಾದ ಸಂತೋಷ ಸಿಗುತ್ತದೆ ಎಂದು ಅರಿತು ತನ್ನ ಸಾಹಸೋದ್ಯಮವನ್ನು ಸ್ಥಗಿತಗೊಳಿಸಿದ ಯಶಸ್ವಿ ಉದ್ಯಮಿ, ಈ ದೇಶದ ಪ್ರತಿಯೊಬ್ಬ ಪರಿತ್ಯಕ್ತ ನಿರ್ಗತಿಕನ ರಕ್ಷಣೆಗೆ ಮುಂದಾಗುವ ಉದ್ದೇಶವನ್ನು ಹೊಂದಿದ್ದಾರೆ.
ವರದಿ : ಕೆ. ಸುಕುಮಾರ್ ರಾಜು