ಪ್ರಶಸ್ತಿ ಕೇಳಿ ಪಡೆಯುವುದು ಸಲ್ಲದು
ರಾಜ್ಯೋತ್ಸವ ಪುರಸ್ಕೃತರಿಗೆ ಕಾನಿಪದಿಂದ ಸನ್ಮಾನ
ವಿಜಯಪುರ : ಪ್ರಶಸ್ತಿ ಕೇಳಿ ಪಡೆಯುವುದಾಗಬಾರದು. ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದರೆ ಸಾಧಕರಿಗೆ ಹೆಚ್ಚು ಸಂತೋಷ ನೀಡುತ್ತದೆ ಎಂದು ಹಿರಿಯ ಪತ್ರಕರ್ತ ಕೆ.ಎನ್. ರಮೇಶ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಪತ್ರಿಕಾ ಭವನದಲ್ಲಿ ಭಾನುವಾರ ರಾಜ್ಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಆದರೆ ಪ್ರಶಸ್ತಿಗಳು ಅಷ್ಟು ಸುಲಭವಾಗಿ ದೊರಕುವುದಿಲ್ಲ. ಪ್ರಶಸ್ತಿ ಲಭಿಸಿದರೂ ಅದರ ಹಿಂದೆ ಅವರ ಸಾಧನೆ ಇದ್ದೇ ಇರುತ್ತದೆ ಎಂದರು.
ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಫೀ ಭಂಡಾರಿ ಸನ್ಮಾನ ಸ್ವೀಕರಿಸಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರಕಾರ ನನಗೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, ಸಂತಸವನ್ನುಂಟು ಮಾಡಿದೆ. ಆದರೆ, ಈ ಪ್ರಶಸ್ತಿ ಲಭಿಸಿದ್ದಕ್ಕೆ ಕೆಲವರು ಟೀಕೆ ಮಾಡಿದ್ದು ನೋವನ್ನುಂಟು ಮಾಡಿದೆ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರಾದ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಸೀತಾರಾಮ ಕುಲಕರ್ಣಿ, ಷಡಕ್ಷರಿ ಕಂಪೂನವರ ಸನ್ಮಾನ ಸ್ವೀಕರಿಸಿ, ತಮಗೆ ಗೌರವ ಸನ್ಮಾನ ನೀಡಿದ ಕಾನಿಪ ಸಂಘಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಅಧ್ಯಕ್ಷತೆ ವಹಿಸಿ, ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿಗೆ ಸಾಧರನ್ನು ಆಯ್ಕೆ ಮಾಡುವಾಗ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಎರಡನ್ನೂ ಪರಿಗಣಿಸುತ್ತಿದೆ. ಆದರೆ ವಯೋಮಿತಿಯಲ್ಲಿಯೂ ಸಡಿಲಿಕೆಯಾಗಬೇಕು ಎಂದರು.
ಹಿರಿಯ ಪತ್ರಕರ್ತ ಸುಶಿಲೇಂದ್ರ ನಾಯಕ, ಕಾನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಉಪಾಧ್ಯಕ್ಷ ಫಿರೋಜ್ ರೋಜಿನದಾರ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿಗಳಾದ ರಾಹುಲ ಆಪ್ಟೆ, ದೀಪಕ ಶಿಂತ್ರೆ, ಸಂಘದ ರಾಜ್ಯ ಸಮಿತಿ ನಾಮನಿರ್ದೇಶಿತ ಸದಸ್ಯ ಕೆ.ಕೆ.ಕುಲಕರ್ಣಿ, ಐಎಫ್ ಡಬ್ಲ್ಯೂಜೆ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ಶೆಟಗಾರ, ಜಿಲ್ಲಾ ಕಾರ್ಯಕಾರಿ ಸಮಿತಿ ನಾಮನಿರ್ದೇಶಿತ ಸದಸ್ಯ ಗುರುರಾಜ ಗದ್ದನಕೇರಿ, ಸದಸ್ಯರಾದ ಗೋಪಾಲ ಕಣಿಮನಿ, ಇಸ್ಮಾಯಿಲ್ ಮುಲ್ಲಾ, ಮಾಧವರಾವ್ ಕುಲಕರ್ಣಿ ಮತ್ತಿತರರಿದ್ದರು.
ಸಂಘದ ಸಲಹಾ ಸಮಿತಿ ಸದಸ್ಯ ಅಶೋಕ ಯಡಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವೇಂದ್ರ ಹೆಳವರ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಉಳ್ಳಾಗಡ್ಡಿ ನಿರೂಪಿಸಿದರು.
ವಿಜಯಪುರದ ಪತ್ರಿಕಾ ಭವನದಲ್ಲಿ ರಾಜ್ಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.